ಬೆಂಗಳೂರಿನಲ್ಲಿ ಭಾರೀ ಸ್ಫೋಟಕ ಸಂಚು – ಐವರು ಶಂಕಿತ ಉಗ್ರರು ಅರೆಸ್ಟ್
ಉಗ್ರರ ಜೊತೆ ಸಂಪರ್ಕ ಸಾಧಿಸಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಸಿಸಿಬಿ ಬಂಧಿಸಿದೆ.
ಸುಹೇಲ್ , ಉಮರ್, ತಬ್ರೇಜ್ , ಮುದಾಸಿರ್ , ಫೈಜಲ್ ರಬ್ಬಾನಿಯನ್ನು ಬಂಧಿಸಲಾಗಿದ್ದು, ಈ ತಂಡದ ನಾಯಕ ಜುನೈದ್ ನಾಪತ್ತೆಯಾಗಿದ್ದಾನೆ. ಶಂಕಿತ ಉಗ್ರರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದು ಜನ ಸಂದಣಿ ಇರುವ ಪ್ರದೇಶದಲ್ಲಿ ಬ್ಲ್ಯಾಸ್ಟ್ ನಡೆಸಲು ಇವರು ತಯಾರಿ ನಡೆಸಿದ್ದರು.
ಎನ್ಐಎ ಮತ್ತು ಸಿಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದೆ. ಶಂಕಿತರ ಮೇಲೆ ಹೆಬ್ಬಾಳ ಠಾಣೆಯಲ್ಲಿ ಸಿಸಿಬಿ ಪ್ರಕರಣ ದಾಖಲಿಸಿದೆ. ವಶಕ್ಕೆ ಪಡೆದ ಶಂಕಿತರನ್ನು ಆಡುಗೋಡಿಯ ಟೆಕ್ನಿಕಲ್ ಸೆಲ್ನಲ್ಲಿ ವಿಚಾರಣೆ ನಡೆಸುತ್ತಿದೆ.
ಆರ್ಟಿ ನಗರದ ಸುಲ್ತಾಲ್ ಪಾಳ್ಯದ ಸೊಹೈಲ್ ಮನೆ ಬಳಿ ಶಂಕಿತರು ಸಭೆ ನಡೆಸುತ್ತಿದ್ದಾಗ ಐವರನ್ನು ಬಂಧಿಸಲಾಗಿದೆ. ಎರಡು ಸ್ಯಾಟಲೈಟ್ ಫೋನ್, 7 ಕಂಟ್ರಿ ಮೇಡ್ ಪಿಸ್ತೂಲ್ , 42 ಸಜೀವ ಗುಂಡುಗಳು ಬಂಧಿತರಿಂದ ವಶ ಪಡಿಸಲಾಗಿದೆ.
4 ಗ್ರೆನೇಡ್ ಹೊಂದಿದ್ದ ಶಂಕಿತ ಉಗ್ರರು ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸುತ್ತಿದ್ದ ವಿಚಾರ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.
Post a Comment