ಅಡ್ಯಾರ್ ಪದವು: ನಾಲ್ಕೈದು ದಿನಗಳ ಹಿಂದೆ ಅಳವಡಿಸಿದ್ದ ಎಸಿ ಸ್ಪೋಟ
ಮನೆಯಲ್ಲಿ ಯಾರು ಇಲ್ಲದ ವೇಳೆ ಎಸಿ ಸ್ಫೋಟಗೊಂಡು ಬೆಂಕಿ ಹಿಡಿದ ಪರಿಣಾಮ ಅಪಾರ ಹಾನಿ ಸಂಭವಿಸಿರುವ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ಪದವು ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಸಂಜೆಯ ವೇಳೆಗೆ ಮನೆಯೊಳಗಿನಿಂದ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ತಕ್ಷಣ ಮನೆಯ ಬಾಗಿಲು ಮುರಿದು ಒಳಹೊಕ್ಕು ಬೆಂಕಿ ನಂದಿಸಿದ್ದಾರೆ. ಮನೆ ಮಾಲಕರು ಬೇರೊಂದು ಮನೆಯಲ್ಲಿ ವಾಸವಾಗಿದ್ದರು.
ಇತ್ತೀಚೆಗೆ ಈ ಮನೆಯಲ್ಲಿ ಮತ್ತೆ ವಾಸಿಸಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ನಾಲ್ಕೈದು ದಿನದ ಹಿಂದೆ ಎಸಿ ಅಳವಡಿಸಿದ್ದರು ಎನ್ನಲಾಗಿದೆ. ರವಿವಾರ ಸಂಜೆ ಈ ಎಸಿ ಸ್ಪೋಟಗೊಂಡಿದೆ. ಮನೆಯ ಬಾಗಿಲು ಮುಚ್ಚಲ್ಪಟ್ಟ ಕಾರಣ ಹೊಗೆ ಆವರಿಸಿದೆ, ಬೆಂಕಿ ಕಾಣಿಸಿದೆ.ಇದರಿಂದ ಪೀಠೋಪಕರಣಗಳು, ಬಟ್ಟೆಬರೆ, ನಗದು, ಪಾಸ್ಪೋರ್ಟ್ ಸಹಿತ ಮನೆಯ ಬೆಲೆ ಬಾಳುವ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.

Post a Comment