".

Header Ads

ಕರಾವಳಿಯಲ್ಲಿ 3 ದಿನ ಬಿರುಗಾಳಿ ಸಹಿತ ಮಳೆ: ಮೇ 25ರವರೆಗೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ; ತಕ್ಷಣ ದಡ ಸೇರಲು ಹವಾಮಾನ ಇಲಾಖೆ ಸೂಚನೆ

ಅರಬ್ಬಿ  ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಮೇ 25ರವರೆಗೆ ಕರ್ನಾಟಕ ಕರಾವಳಿಯ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದೆ.

ಈಗಾಗಲೇ ಆಳ ಸಮುದ್ರ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಹವಾಮಾನ ಇಲಾಖೆಯ ಅಧಿಕೃತ ಸೂಚನೆಗಳನ್ನು ಪಾಲಿಸಿ, ತಕ್ಷಣವೇ ಸುರಕ್ಷಿತವಾಗಿ ದಡ ಸೇರಬೇಕು ಎಂದು ಅಧಿಕಾರಿಗಳು ತುರ್ತು ಆದೇಶ ಹೊರಡಿಸಿದ್ದಾರೆ.
 
ಮೇ 20ರಿಂದ ಮೇ 22ರವರೆಗೆ ಕರ್ನಾಟಕ, ಕೇರಳ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಇನ್ನು ನೈರುತ್ಯ ಅರಬ್ಬಿ ಸಮುದ್ರದ ಹಲವು ಭಾಗಗಳಲ್ಲಿ, ವಿಶೇಷವಾಗಿ ಸೊಮಾಲಿಯ ಕರಾವಳಿಯ ಉದ್ದಕ್ಕೂ ಗಾಳಿಯ ವೇಗ ಗರಿಷ್ಠ 65 ಕಿಲೋಮೀಟರ್ ತಲುಪುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.
ಇದಲ್ಲದೆ ಮನ್ನಾರ್ ಕೊಲ್ಲಿ, ದಕ್ಷಿಣ ಬಂಗಾಳ ಕೊಲ್ಲಿಯ ನೈರುತ್ಯ ಮತ್ತು ಆಗ್ನೇಯ ಭಾಗಗಳು, ಅಂಡಮಾನ್ ಸಮುದ್ರದ ವ್ಯಾಪ್ತಿ ಹಾಗೂ ಶ್ರೀಲಂಕಾ ಕರಾವಳಿಯ ಕೆಲವು ಭಾಗಗಳಲ್ಲಿಯೂ ಗಾಳಿಯ ತೀವ್ರತೆ ಗಣನೀಯವಾಗಿ ಹೆಚ್ಚಾಗಲಿದೆ. ಕರಾವಳಿ ಜಿಲ್ಲೆಗಳ ಮೀನುಗಾರರು ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತಗಳು ವಿನಂತಿಸಿವೆ.
Powered by Blogger.