".

Header Ads

ಒಡಿಯೂರಿನಲ್ಲಿ ತುಳುನಾಡ ಜಾತ್ರೆ – ತುಳು ಸಾಹಿತ್ಯ ಸಮ್ಮೇಳನ ಸಮಾರೋಪ, ಪ್ರಶಸ್ತಿ ಪ್ರದಾನ

 

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ  ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ, ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಜನವರಿ 30 ಮತ್ತು 31 ರಂದು ನಡೆದ ತುಳುನಾಡ ಜಾತ್ರೆ ಶ್ರೀ ಒಡಿಯೂರು ರಥೋತ್ಸವದ ಸಮಾರೋಪ ಹಿನ್ನೆಲೆಯಲ್ಲಿ ಮಂಗಳವಾರ ತುಳುಸಾಹಿತ್ಯ ಸಮ್ಮೇಳನದ ಧರ್ಮಸಭೆ ಹಾಗೂ ತುಳುಸಿರಿ ಪ್ರಶಸ್ತಿ ಪ್ರದಾನ, ತುಳು ನಾಟಕೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಗುರುದೇವಾನಂದ ಸ್ವಾಮೀಜಿ, 108 ಅಡಿ ಎತ್ತರದ ಹನುಮಾನ್ ವಿಗ್ರಹದ ನಿರ್ಮಾಣ ಸಹಿತ ಕ್ಷೇತ್ರದಲ್ಲಾಗುವ ಪ್ರಮುಖ ಯೋಜನೆಗಳ ಕುರಿತು ಮಾಹಿತಿ ನೀಡಿದರು. ದುಶ್ಚಟಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದ ಸ್ವಾಮೀಜಿ, ಮನೆ ಮನೆಯಲ್ಲಿ ಧಾರ್ಮಿಕ ಶಿಕ್ಷಣದ ಪಾಠದ ಪ್ರಸ್ತುತತೆ ಮತ್ತು ಅಗತ್ಯಗಳ ಕುರಿತು ಜ್ಞಾಪಿಸಿದರು. ಆರೋಗ್ಯಪೂರ್ಣ ಬದುಕು ನಮಗೆ ಆಗಬೇಕು ಎಂದಾದರೆ, ಶ್ರದ್ಧಾಕೇಂದ್ರಗಳು ಬಲಗೊಳ್ಳಬೇಕು, ಇಂದು ಹೃದಯಾಘಾತದಿಂದ ಸಾವುಗಳು ಹೆಚ್ಚಾಗುತ್ತಿರುವ ಕುರಿತು ಉಲ್ಲೇಖಿಸಿದ ಅವರು, ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಭಾರತ ದೇಶದ ಅಂತಸತ್ವ ಎಂದರೆ ಆಧ್ಯಾತ್ಮ ಎಂದು ಹೇಳಿದರು.ಈ ಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ವಸಂತಕುಮಾರ ಪೆರ್ಲ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ತುಳು ರಾಜ್ಯಭಾಷೆ ಆಗಬೇಕು ಎಂಬುದು ಎಲ್ಲರ ಪ್ರಬಲ ಇಚ್ಛೆಯಾಗಿದ್ದು, ತುಳುವನ್ನು ಎಂಟನೇ ಪರಿಚ್ಛೇದ ಸೇರ್ಪಡೆಗೆ ಪ್ರಯತ್ನಗಳು ಆಗುತ್ತಿದೆ, ಮುಂದೆಯೂ ನಮ್ಮದೇ ಸರಕಾರ ಬರಲಿದ್ದು, ನಾನು ಮತ್ತು ಶಾಸಕ ರಾಜೇಶ್ ನಾಯ್ಕ್ ಒಡಿಯೂರು ಶ್ರೀಗಳ ಕಲ್ಪನೆಯ ಗ್ರಾಮರಾಜ್ಯವನ್ನು ಸಾಕಾರಗೊಳಿಸುವುದಕ್ಕೆ ನೆರವಾಗುತ್ತೇವೆ ಎಂದರು.

ಮನೆಮನೆಗಳಲ್ಲಿ ರಾವಣ ಸೃಷ್ಟಿ ಆಗುವ ಕಾರಣ ಮನೆಮನೆಗಳಲ್ಲಿ ರಾಮನ ಸೃಷ್ಟಿ ಆಗಬೇಕು ಎಂಬ ಗಾಂಜಿ ಅವರ  ಗ್ರಾಮರಾಜ್ಯದ ಪರಿಕಲ್ಪನೆ ಗ್ರಾಮಸ್ವರಾಜ್ಯ ಮೂಲಕ ಒಡಿಯೂರು ಶ್ರೀಗಳು ನನಸು ಮಾಡಿದ್ದಾರೆ. ಭಾರತವಿಂದು ಸಾಂಸ್ಕೃತಿಕವಾಗಿ ಎದ್ದು ನಿಲ್ಲುವ ಕಾಲಘಟ್ಟದಲ್ಲಿ ನಾವಿದ್ದೇವೆ, ತುಳು, ಭಾಷೆ, ಪರಂಪರೆಗೆ ಧರ್ಮಸ್ಥಳ ಮತ್ತು ಒಡಿಯೂರು ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಇಂದು ಧಾರ್ಮಿಕ ಕ್ಷೇತ್ರಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ ಬಂಟ್ವಾಳ ಕ್ಷೇತ್ರದಾದ್ಯಂತ ಆಗಿದ್ದು, ಅವುಗಳಲ್ಲಿ ಒಡಿಯೂರು ಕ್ಷೇತ್ರಕ್ಕೆ ಬರುವ ರಸ್ತೆಗಳೂ ಸೇರಿವೆ ಎಂದರು.

ಹೇರಂಭ ಇಂಡಸ್ಟ್ರೀಸ್ ಮುಂಬೈನ ಮಾಲೀಕ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮುಂಬೈ ಸಂಜೀವಿನಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಸುರೇಶ್ ರಾವ್,  ವಿಜಯಲಕ್ಷ್ಮಿ  ರಾವ್, ಉದ್ಯಮಿ ವಾಮಯ್ಯ ಬಿ.ಶೆಟ್ಟಿ, ಉದ್ಯಮಿ ದಯಾನಂದ ಹೆಗ್ಡೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ್ ರೈ ಉಪಸ್ಥಿತರಿದ್ದರು.ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ತುಳುಕೂಟ ಅಧ್ಯಕ್ಷ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಮಾಂತೇಶ್ ಬಂಡಾರಿ ವಂದಿಸಿದರು.

ಇದೇ ಸಂದರ್ಭ ಮಲಾರು ಜಯರಾಮ ರೈ ಬರೆದ ಒಡಿಯೂರು ಶ್ರೀಗಳ ಪ್ರವಚನಗಳ ದೃಷ್ಟಾಂತ ಕತೆಗಳ ಮಾಲಿಕೆ ’ಕತೆ ಪಂಡೆನ ಜೋಗಿ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಹಿರಿಯ ಮೃದಂಗ ವಾದಕ ವಿದ್ವಾನ್ ಬಾಬು ರೈ ಕಾಸರಗೋಡು, ತುಳು ಸಾಹಿತಿ ಡಾ. ಸಾಯಿಗೀತಾ ತೋಕೂರುಗುತ್ತು, ಸಹಕಾರಿಯ ಸಾಧಕ ಎಸ್.ಬಿ. ಜಯರಾಮ ರೈ, ತುಳುನಾಡಿನ ಹಳೇಯ ವಸ್ತುಗಳ ಸಂಗ್ರಹಕ್ಕಾಗಿ ಸುಧಾಕರ ಶೆಟ್ಟಿ ಹಿರ್ಗಾನ, ಸಾವಯವ ಕೃಷಿಗಾಗಿ ರಾಮಣ್ಣ ಗೌಡ ಕಣಿಯೂರುರವರಿಗೆ ತುಳುಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಬಳಿಕ ಒಡಿಯೂರು ತುಳು ನಾಟಕೋತ್ಸವ ತುಳು ನಾಟಕ ಪಂಥೊದ ಇನಾಮು ಪಟ್ಟುನ ಲೇಸ್ ನಡೆಯಿತು. ನಾಟಕೋತ್ಸವದ ವಿಜೇತರ ಪಟ್ಟಿಯನ್ನು ಕದ್ರಿ ನವನೀತ ಶೆಟ್ಟಿ ಓದಿ, ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ನೃತ್ಯಾರ್ಪಣಂ ಕಾರ್ಯಕ್ರಮ, ಜರ್ನಿ ಥೇಟರ್ ಗ್ರೂಪ್ಸ್ ನಾಟಕ ಗೋಂದೋಳು ಪ್ರದರ್ಶನ ನಡೆಯಿತು. ರಾತ್ರಿ ವೈಭವದ ರಥಯಾತ್ರೆ ಸಂಪನ್ನಗೊಂಡಿತು.

Powered by Blogger.