ದಶಕಗಳ ಹಿಂದಿನ ಬೇಡಿಕೆ :ಕನಸಾಗಿಯೇ ಉಳಿದ ಕಾರ್ಕಳ ರೈಲು ಮಾರ್ಗ
ನಂದಿಕೂರು – ಕಾರ್ಕಳ – ಉಜಿರೆ – ಚಾರ್ಮಾಡಿ – ಮೂಡಿಗೆರೆ ನಡುವಿನ 136 ಕಿ. ಮೀ. ಉದ್ದೇಶಿತ ರೈಲು ಮಾರ್ಗ ಆರ್ಥಿಕವಾಗಿ ಕಾರ್ಯ ಸಾಧ್ಯವಲ್ಲ ಎಂದು ರೈಲ್ವೇ ಬೋರ್ಡ್ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಈ ಮಾರ್ಗದ ಪ್ರಸ್ತಾವನೆಯನ್ನು ರೈಲ್ವೇ ಮಂಡಳಿ ಕೈ ಬಿಟ್ಟಿದೆ.
ಪಡುಬಿದ್ರಿ- ಕಾರ್ಕಳ -ಉಜಿರೆ – ಧರ್ಮಸ್ಥಳ -ನೆಟ್ಟಣ ಹಾಗೂ ನಂದಿಕೂರು – ಚಾರ್ಮಾಡಿ ನಡುವಿನ 2 ಪರ್ಯಾಯ ರೈಲು ಮಾರ್ಗಗಳ ಬೇಡಿಕೆ ದಶಕದ ಹಿಂದಿ ನದ್ದು. ಪಡುಬಿದ್ರಿ-ನೆಟ್ಟಣದ 120 ಕಿ.ಮೀ. ಉದ್ದದ ಮಾರ್ಗದ ಸರ್ವೇ ನಡೆದಿದೆ.
ಆದರೂ ಈ ಕುರಿತು ಯಾವುದೇ ಪ್ರಸ್ತಾವನೆಗಳು ರೈಲ್ವೇ ಇಲಾಖೆ ಮಟ್ಟದಲ್ಲಿ ಇದುವರೆಗೂ ಮುನ್ನೆಲೆಗೆ ಬಂದಿಲ್ಲ
ನಂದಿಕೂರು – ಮೂಡಿಗೆರೆ ಮಧ್ಯೆ 135 ಕಿ.ಮೀ. ಹೊಸ ಪರ್ಯಾಯ ರೈಲು ಮಾರ್ಗದ ಸರ್ವೆ ನಡೆಸುವಂತೆ ಉಡುಪಿ ರೈಲ್ವೇ ಯಾತ್ರಿಕರ ಸಂಘ ಸಹಿತ ರೈಲು ಪ್ರಯಾಣಿಕರು ದಶಕದಿಂದಲೂ ಆಗ್ರಹಿಸುತ್ತಿದ್ದಾರೆ. ಸರ್ವೇ ಬಳಿಕ ಸ್ವಲ್ಪ ಭರವಸೆ ಮೂಡಿತ್ತಾದರೂ ಈಗ ನಿರಾಶೆಯಾಗಿದೆ.
2010ರ ರೈಲ್ವೇ ಬಜೆಟ್ನಲ್ಲಿ ಈ ಮಾರ್ಗದ ಸಮೀಕ್ಷೆ ಸಹಿತ ಎರಡು ಯೋಜನೆಗಳಿಗೆ ಆಗಿನ ರೈಲ್ವೇ ಮಂತ್ರಿ ಮಮತಾ ಬ್ಯಾನರ್ಜಿ ಅನು ಮೋದನೆ ನೀಡಿದ್ದರು. ಬೈಂದೂರು – ಹೆಬ್ರಿ – ಕಾರ್ಕಳ-ಮೂಡುಬಿದಿರೆ – ನೆಟ್ಟಣ ಕೂಡ ಈ ಯೋಜನೆಯಲ್ಲಿ ಒಳಗೊಂಡಿತ್ತು. ಅರಣ್ಯ ಇಲಾಖೆ ಅಡ್ಡಿಪಡಿಸಿದ್ದರಿಂದ ಇದರ ಸರ್ವೇ ಸಾಧ್ಯವಾಗಿರಲಿಲ್ಲ.
ಉಡುಪಿ ಜಿಲ್ಲೆಯ 3 ತಾಲೂಕುಗಳಲ್ಲಿ ರೈಲು ಸಂಪರ್ಕವಿಲ್ಲ. ಕರಾವಳಿ ಜಿಲ್ಲೆಯವರು ಕೇಂದ್ರದಲ್ಲಿ ರೈಲ್ವೇ ಮಂತ್ರಿ ಯಾಗಿದ್ದರೂ ಇದು ಕಾರ್ಯ ಗತವಾಗಿಲ್ಲ. ರೈಲ್ವೇ ಮಂಡಳಿ ಕೈಬಿಟ್ಟರೂ ಕೇಂದ್ರ ಮತ್ತು ರಾಜ್ಯ ಸರಕಾರ ಕೈಜೋಡಿಸಿದರೆ ಈ ಯೋಜನೆಯನ್ನು ಕಾರ್ಯ ಗತಗೊಳಿಸಬಹುದು.
ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡುವ ಕೆಲಸವನ್ನು ಕರಾವಳಿಯ ಜನ ಪ್ರತಿನಿಧಿಗಳು ಮಾಡಬೇಕು ಎಂದು ರೈಲು ಪ್ರಯಾಣಕ್ಕೆ ಆದ್ಯತೆ ನೀಡುವ ದಿನೇಶ್ ಬೆಂಗಳೂರು ಅವರು ಹೇಳುತ್ತಿದ್ದಾರೆ.
ಹೊಸ ರೈಲು ಮಾರ್ಗದ ಸರ್ವೇ ನಡೆದು ವಿಸ್ಕೃತ ವರದಿಯನ್ನು ರೈಲ್ವೆ ಬೋರ್ಡ್ 2022ರಲ್ಲಿ ಕೇಂದ್ರ ಸಚಿವಾಲಯಕ್ಕೆ ಸಲ್ಲಿಸಿದೆ. ಸರ್ವೇಯಲ್ಲಿ ಕಂಡು ಬಂದ ಅಂಶಗಳಿಂದ ಅರ್ಥಿಕವಾಗಿ ಈ ಮಾರ್ಗ ಕಾರ್ಯಸಾಧುವಲ್ಲ ಎಂದು ಮಂಡಳಿ ಈ ಪ್ರಸ್ತಾವನೆಯನ್ನು ಕೈಬಿಟ್ಟಿದೆ.
– ಅನೀಶ ಹೆಗ್ಡೆ , ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೇ
ಈ ರೈಲು ಯೋಜನೆ ಕೇಂದ್ರ ಸರಕಾರದ ವ್ಯಾಪ್ತಿಯದ್ದಾಗಿದೆ. ಹೊಸ ರೈಲು ಮಾರ್ಗದ ಸರ್ವೇ ಕಾರ್ಯ ಈ ಹಿಂದೆಯೇ ನಡೆದಿತ್ತು. ಪ್ರಸ್ತಾವನೆ ಕೈ ಬಿಟ್ಟ ಬಗ್ಗೆ ಮಾಹಿತಿ ಪಡೆಯುವೆ.
– ವಿ. ಸುನಿಲ್ ಕುಮಾರ್,
ಕಾರ್ಕಳ ಶಾಸಕ ಹಾಗೂ ಇಂಧನ ಸಚಿವರು

Post a Comment