ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ-ಧಾರ್ಮಿಕಸಭೆ
ಎಲ್ಲರಿಗೆ ಇಂತಹ ಬ್ರಹ್ಮಕಲಶದಲ್ಲಿ ಪಾಲುಪಡೆಯುವ ಸೌಭಾಗ್ಯ ಒದಗಿ ಬರುವುದಿಲ್ಲ: ಶ್ರೀ ವಿದ್ಯಾಪ್ರಸನ್ನ ಶ್ರೀಪಾದರು
ಎಲ್ಲರಿಗೆ ಇಂತಹ ಬ್ರಹ್ಮಕಲಶದಲ್ಲಿ ಪಾಲುಪಡೆಯುವ ಸೌಭಾಗ್ಯ ಒದಗಿ ಬರುವುದಿಲ್ಲ. ಅಂತಹ ಸೌಭಾಗ್ಯ ನಮಗೆ ಒದಗಿ ಬಂದಿದೆ. ನಮ್ಮ ಆಕಾಂಕ್ಷೆಗಳು ಫಲಿಸಬೇಕಾದರೆ ದೇವರ ಬಯಕೆ ಕೂಡಾ ಅದೇ ಆಗಿರಬೇಕು. ನಮ್ಮ ಯಾವುದೇ ಚಿತ್ತದ ಜತೆ ದೈವೀಚಿತ್ರ ಕೂಡಿಬಂದಾಗ ನಮ್ಮ ಬಯಕೆ ಈಡೇರುತ್ತದೆ. ಅದ್ಬುತವಾಗಿ ನಿರ್ಮಾಣ ಆಗಿರುವ ದೇವಸ್ಥಾನದಲ್ಲಿ ನಿತ್ಯನಿರಂತರ ಪೂಜೆ ಪುರಸ್ಕಾರಗಳು ನಡೆದುಕೊಂಡು ಬರಲಿ, ಆ ಮೂಲಕ ಸಾನಿಧ್ಯ ಮತ್ತಷ್ಟು ವೃದ್ಧಿಯಾಗಲಿ, ದಾನಿಗಳನ್ನು ಪರಮಾತ್ಮ ಅನುಗ್ರಹಿಸಲಿ ಎಂದು ಸುಬ್ರಹ್ಮಣ್ಯ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಂನ ಶ್ರೀ ವಿದ್ಯಾಪ್ರಸನ್ನ ಶ್ರೀಪಾದರು ನುಡಿದರು.
ಅವರು ಮೇ ೧೪ರಿಂದ ಮೊದಲ್ಗೊಂಡು ೨೫ರವರೆಗೆ ಜರಗುತ್ತಿರುವ ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ರವಿವಾರ ಸಂಜೆ ಜರಗಿದ ಧಾರ್ಮಿಕಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕ್ಷೇತ್ರದ ತಂತ್ರಿಗಳಾದ ವೇ|ಮೂ| ಅನಂತ ಉಪಾಧ್ಯಾಯ ಹಾಗೂ ಕುಡುಪು ಕ್ಷೇತ್ರದ ವೇ|ಮೂ| ನರಸಿಂಹ ತಂತ್ರಿ ಆಶೀರ್ವಚನ ನೀಡಿದರು. ಎಸ್.ಆರ್. ಬಂಜನ್ ಪುಣೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮಹಾ ಪೌರರಾದ ಪ್ರೇಮಾನಂದ ಶೆಟ್ಟಿ, ಮಹಾಬಲೇಶ್ವರ ಭಟ್ ಸಿ.ಎ., ಸುರೇಂದ್ರ ಶೆಟ್ಟಿ ಮುಂಬೈ, ಮನಪಾದ ಕಿಶೋರ್ ಕೊಟ್ಟಾರಿ, ಮನಪಾ ಸದಸ್ಯೆ ಗಣೇಶ್ ಕುಲಾಲ್, ಲೋಕೇಶ್ ಬೊಳ್ಳಾಜೆ, ಭಜರಂಗದಳದ ಭುಜಂಗ ಕುಲಾಲ್ ಅದ್ಯಪಾಡಿ, ಉದ್ಯಮಿ ಪ್ರವೀಣ್ ಆಳ್ವ, ಉದ್ಯಮಿ ರಾಜೇಶ್, ನಾಗೇಶ್ ಕುಲಾಲ್ ಕುಳಾಯಿ, ರೇವತಿ ಡೊಂಬಯ್ಯ ಕುಲಾಲ್ ಪೆರ್ನೆ, ಕುಲಾಲ ಸಂಘ ಮುಂಬೈಯ ಮೀರಾ ರೋಡ್ - ವಿರಾರ ಸಲಿಯ ಸಮಿತಿಯ ಕಾರ್ಯಾಧ್ಯಕ್ಷ ಅಮೂಲ್ಯ ಪತ್ರಿಕೆಯ ಸಂಪಾದಕ ಶಂಕರ ವೈ. ಮೂಲ್ಯ ಮುಂಬೈ, ದೇವೇಂದ್ರ ಹೆಗ್ಡೆ, ಉದ್ಯಮಿ ಗಣೇಶ್ ಕುಲಾಲ್, ಕುಲಾಲ ಸಂಘ ಮುಂಬೈಯ ಮೀರಾ ರೋಡ್ - ವಿರಾರ ಸಲಿಯ ಸಮಿತಿಯ ಉಪ ಕಾರ್ಯಾಧ್ಯಕ್ಷ ರೇಣುಕಾ ಸಾಲ್ಯಾನ್ ಮುಂಬೈ, ಕಿರಣ್ ರೈ, ಸಂಜೀವ ಬಂಗೇರ ನಾಸಿಕ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಸ್ವಾಗತಿಸಿ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಪ್ರಸ್ತಾವಿಸಿದರು.
--------
ಸಮುದಾಯಕ್ಕೆ ಸುಸಜ್ಜಿತ ಸಮುದಾಯ ಭವನ ಮತ್ತು ಲೇಡಿಸ್ ಹಾಸ್ಟೇಲ್ ನಿರ್ಮಾಣಕ್ಕೆ ಸಹಕಾರ:
ಶಾಸಕ ವೇದವ್ಯಾಸ ಕಾಮತ್
ಕ್ಷೇತ್ರದ ವೀರನಾರಾಯಣ ದೇವರು ವಿದ್ವುಕ್ವವಾಗಿ ಬೆಳಗುವ ಮೂಲಕ ಸಮುದಾಯಕ್ಕೆ ಆಶೀರ್ವಾದ ಮಾಡಿದ್ದಾರೆ. ಸರಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಮಾತ್ರವಲ್ಲದೆ ಸಮುದಾಯಕ್ಕೆ ಒಂದು ಸುಸಜ್ಜಿತ ಸಮುದಾಯ ಭವನ ಮತ್ತು ಲೇಡಿಸ್ ಹಾಸ್ಟೇಲ್ ನಿರ್ಮಾಣಕ್ಕೆ ಗರಿಷ್ಠ ಪ್ರಮಾಣದ ಅನುದಾನ ಒದಗಿಸುತ್ತೇನೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.













Post a Comment