ಬೆಂಗಳೂರಿನತ್ತ ಆಗಮಿಸುತ್ತಿರುವ ಮಿತ್ರ ಪಕ್ಷಗಳ ದಂಡು: ಮೋದಿ ವಿರುದ್ಧ ವಿಪಕ್ಷಗಳ ಸಮರ ,ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು-ನಾಳೆ ಮಹಾಮೈತ್ರಿ ಸಭೆ
ಲೋಕಸಭಾ ಚುನಾವಣೆ:-ಯಲ್ಲಿ ಬಿಜೆಪಿ ವಿರುದ್ಧ ದಿಟ್ಟ ಹೋರಾಟ ನಡೆಸಲು ವಿರೋಧಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಮೊದಲ ರಾಜಕೀಯ ಸಭೆಯ ಬಳಿಕ ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿನತ್ತ ಆಗಮಿಸುತ್ತಿರುವ ಯುಪಿಎ ಮಿತ್ರಪಕ್ಷಗಳ ದಂಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ರಣತಂತ್ರ ರೂಪಿಸಲಿದೆ.
ಪಾಟ್ನಾದಲ್ಲಿ ನಡೆದ ಮೊದಲ ಮಹಾಘಟಬಂಧನ್ ಸಭೆಗೆ ಆಹ್ವಾನ ನೀಡತ್ತಲಾಗಿದ್ದರೂ ಜೆಡಿಎಸ್ ನಾಯಕರು ಆ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಹಾಗಾಗಿ, ಇಂದು ಮತ್ತು ನಾಳೆ ಬೆಂಗಳೂರಲ್ಲೇ ಮೈತ್ರಿ ಕೂಟದ ಸಭೆ ನಡೆಯುತ್ತಿದ್ದರೂ ಸಹ ಜೆಡಿಎಸ್ ಪಕ್ಷ ಎನ್ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವ ವದಂತಿಯ ಹಿನ್ನೆಲೆಯಲ್ಲಿ ಇದುವರೆಗೂ ಜೆಡಿಎಸ್ ಪಕ್ಷಕ್ಕೆ ಅಧಿಕೃತ ಆಹ್ವಾನ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಜುಲೈ 17 ಮತ್ತು ಜುಲೈ 18ರಂದು ಬೆಂಗಳೂರಿನ ಪ್ರಸಿದ್ಧ ಖಾಸಗಿ ಹೋಟೆಲ್ಗಳಲ್ಲಿ ಒಂದಾದ ತಾಜ್ ವೆಸ್ಟೆಂಡ್ನಲ್ಲಿ ಮಹಾಘಟಾಬಂಧನ್ ಮಹಾಮಿಲನ ನಡೆಯಲಿದೆ. ಈ ಹಿನ್ನಲೆಯಲ್ಲಿ ರೇಸ್ಕೋರ್ಸ್ ರಸ್ತೆಯಲ್ಲಿ ಯುಪಿಎ ಮಿತ್ರಪಕ್ಷಗಳ ಪ್ರಮುಖ ನಾಯಕರ ಬಾವುಟಗಳು ರಾರಾಜಿಸುತ್ತಿವೆ. ಈಗಾಗಲೇ ಕೆಲ ರಾಷ್ಟ್ರ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಕೋಲ್ಕತ್ತಾ ಹಾಗೂ ಉತ್ತರ ಪ್ರದೇಶದಿಂದ ವಿವಿಧ ಪಕ್ಷದ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಕಾಂಗ್ರೆಸ್ನ ಮಾಜಿ ಸಚಿವ ಹಾಲಿ ರಾಜ್ಯಸಭಾ ಸದಸ್ಯ ಡೆರೆಕ್ ಒರ್ಬಿನ್, ಸಮಾಜವಾದಿ ಪಾರ್ಟಿಯ ಲಾಲ್ ಜಿ ವರ್ಮಾ, ರಾಮಚಂದ್ರ ರಾಜ್ಯಾಭಾರ್ ಆಗಮಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರಾದ ಶರತ್ ಬಚ್ಚೇಗೌಡ ಮತ್ತು ಎಸಿ ಶ್ರೀನಿವಾಸ್ ಅವರು ಗಣ್ಯರಿಗೆ ಸ್ವಾಗತ ಕೋರಿದ್ದಾರೆ.
ಇನ್ನೂ ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ನಾಯಕರನ್ನು ಬರಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್ ಘಟಕ ಪ್ರತ್ಯೇಕವಾಗಿ ಒಬ್ಬೊಬ್ಬ ನಾಯಕರನ್ನ ಬರಮಾಡಿಕೊಳ್ಳಲು ಒಬ್ಬೊಬ್ವ ಶಾಸಕರನ್ನು ನೇಮಕ ಮಾಡಿದೆ. ರಾಷ್ಟ್ರೀಯ ನಾಯಕರನ್ನು ಬೆಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ನಿಂದ ನೇರವಾಗಿ ಹೋಟೆಲ್ಗಳಿಗೆ ಕರೆದುಕೊಂಡು ಹೋಗಲಾಗ್ತಿದೆ. ಇನ್ನೆರಡು ದಿನ ಬೆಂಗಳೂರಿನಲ್ಲೇ ಬೀಡು ಬಿಡಲಿರುವ ಮಿತ್ರ ಪಕ್ಷಗಳ ನಾಯಕರು ಮಹಾಸಭೆಯಲ್ಲಿ ಪ್ರಮುಖ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.
ಈ ಸಭೆಗೆ ಭಾಗವಹಿಸುವ ನಾಯಕರು ಹಾಗೂ ಅವರ ಪಕ್ಷಗಳ ಪಟ್ಟಿ ಇಂತಿದೆ.
1. ಕಾಂಗ್ರೆಸ್- ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್,
2. ಟಿಎಂಸಿ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಒಬ್ರಯಾನ್,
3. ಸಿಪಿಐ- ಡಿ ರಾಜಾ
4. ಸಿಪಿಎಂ- ಸೀತಾರಾಮ್ ಯಚೂರಿ
5. ಎನ್ಸಿಪಿ- ಶರದ್ ಪವಾರ್, ಜಿತೇಂದ್ರ ಅವ್ಹಾದ್, ಸುಪ್ರಿಯಾ ಸುಳೆ,''
6. ಜೆಡಿಯು- ನಿತಿಶ್ ಕುಮಾರ್, ಲಲ್ಲನ್ ಸಿಂಗ್, ಸಂಜಯ್ ಕುಮಾರ್ ಝಾ
7. ಡಿಎಂಕೆ- ಎಂಕೆ ಸ್ಟಾಲಿನ್, ಟಿಆರ್ ಬಾಲು
8. ಎಎಪಿ- ಅರವಿಂದ ಕೇಜ್ರಿವಾಲ್,
9. ಜಿಎಂಎಂ- ಹೇಮಂತ್ ಸೊರೇನ್
10. ಶೀವಸೇನಾ (ಯುಬಿಟಿ)- ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್,
11. ಆರ್ಜೆಡಿ- ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಮನೋಜ್ ಝಾ, ಸಂಜಯ್ ಯಾದವ್,
12. ಸಮಾಜವಾದಿ ಪಕ್ಷ- ಅಖಿಲೇಶ್ ಯಾದವ್, ರಾಮಗೋಪಾಲ್ ಯಾದವ್, ಜಾವೇದ್ ಅಲಿಖಾನ್, ಲಾಲ್ ಜಿ ವರ್ಮಾ, ರಾಮ್ ಅಚಲ್, ರಾಹ್ ಭರ್, ಅಶೀಷ್ ಯಾದವ್,
13. ನ್ಯಾಷನಲ್ ಕಾನ್ಪರೆನ್ಸ್- ಒಮರ್ ಅಬ್ದುಲ್ಲಾ
14. ಪಿಡಿಪಿ- ಮೆಹಬೂಬಾ ಮುಫ್ತಿ
15. ಸಿಪಿಐ(ಎಂಎಲ್)- ದೀಪಂಕರ್ ಭಟ್ಟಾಚಾರ್ಯ
16. ಆರ್ಎಲ್ಡಿ- ಜಯಂತ್ ಸಿಂಗ್ ಚೌಧರಿ
17. ಐಯುಎಂಎಲ್- ಕೆಎಂ ಖಾದರ್ ಮೊಯ್ದಿನ್, ಪಿಕೆ ಕುಂಞಲಿಕುಟ್ಟಿ
18. ಕೇರಳ ಕಾಂಗ್ರೆಸ್ (ಎಂ)- ಜೋಸ್ ಕೆ ಮಣಿ
19. ಎಂಡಿಎಂಕೆ- ವೈಕೋ, ಜಿ ರೇಣುಕಾದೇವಿ
20. ವಿಸಿಕೆ- ಟಿ ತಿರುಮಾವಳನ್, ರವಿಕುಮಾರ್
21. ಆರ್ಎಸ್ಪಿ- ಎನ್ಕೆ ಪ್ರೇಮಚಂದ್ರನ್
22. ಕೇರಳ ಕಾಂಗ್ರೆಸ್- ಪಿಜೆ ಜೋಸೆಫ್, ಫ್ರಾನ್ಸಿಸ್ ಜಾರ್ಜ್ ಕೆ
23. ಕೆಎಂಡಿಕೆ- ಇಆರ್ ಈಶ್ವರನ್, ಎಕೆ ಜಿನ್ರಾಜ್
24. ಎಐಎಫ್ಬಿ- ಜಿ ದೇವರಾಜನ್.
ಬೆಂಗಳೂರಿನಲ್ಲಿ ನಡೆಯುವ ಈ ಸಭೆಯಲ್ಲಿ ಸೋನಿಯಾ ಗಾಂಧಿ ಅವರ ಉಪಸ್ಥಿತಿಯು ವಿಶೇಷ ಮಹತ್ವ ಪಡೆದುಕೊಂಡಿದೆ. ತಮ್ಮ ಛಾಪು ಮೂಡಿಸಲು ಹವಣಿಸುತ್ತಿರುವ ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ಕಲ್ಪಿಸಲು ಕಾಂಗ್ರೆಸ್ ಪರವಾಗಿ ನೈತಿಕ ಬೆಂಬಲವನ್ನು ಘೋಷಿಸಲು ಈ ಸಭೆ ಎಲ್ಲರಿಗೂ ಒಂದು ಕರೆಗಂಟೆಯಾಗಿದೆ ಎಂದು ಬಿಹಾರದ ಮೈತ್ರಿ ನಾಯಕರೊಬ್ಬರು ಹೇಳಿದ್ದಾರೆ.
ದೆಹಲಿ ಸುಗ್ರೀವಾಜ್ಞೆಯನ್ನು ವಿರೋಧಿಸುವ ಪಕ್ಷದ ನಿರ್ಧಾರದೊಂದಿಗೆ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಕಾಂಗ್ರೆಸ್ನ ಎಚ್ಚರಿಕೆ ಆಟದಿಂದ ಕಾಂಗ್ರೆಸ್ ಮತ್ತು ಎಎಪಿ ನಡುವಿನ ಭಾಂಧವ್ಯದಿಂದ ಈಗ ಎಎಪಿ ಕೂಡ ಭಾಗವಹಿಸುತ್ತಿದೆ. ಬೆಂಗಳೂರು ಸಭೆಗೂ ಮುನ್ನ ಕಾಂಗ್ರೆಸ್ ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸದಿದ್ದರೆ ಒಗ್ಗಟ್ಟಿನ ಪ್ರಯತ್ನಗಳನ್ನು ಬಹಿಷ್ಕರಿಸುವುದಾಗಿ ಅದು ತಿಳಿಸಿತ್ತು.

Post a Comment