ವರದಿಗಳ ಪ್ರಕಾರ, ಅಮೆರಿಕದಲ್ಲಿ ಅಗ್ನಿವೇಶ್ ಹೃದಯ ಸ್ತಂಭನಗೊಂಡು ವಿಧಿವಶರಾಗಿದ್ದಾರೆ. ಅಗ್ನಿವೇಶ್ ನಿಧನಕ್ಕೆ ತಂದೆ ಅಗರ್ವಾಲ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.
ವೇದಾಂತ ಗ್ರೂಪ್ನ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಗ್ನಿವೇಶ್ ಅಗರ್ವಾಲ್ ಅವರು ಸ್ಕೈಯಿಂಗ್ ಆಡುವಾಗ ಅಪಘಾತಗೊಂಡು ಗಾಯಗೊಂಡಿದ್ದರು. ನ್ಯೂಯಾರ್ಕ್ನ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗಿದ್ದರು. ಆದರೆ, ಇದೀಗ ದಿಢೀರ್ ಆಗಿ ಕಾರ್ಡಿಯಾಕ್ ಅರೆಸ್ಟ್ ಆಗಿ ನಿಧನರಾಗಿದ್ದಾರೆ. ತಮ್ಮ ಮಗನ ಮರಣವು ತಮ್ಮ ಜೀವನದ ಅತ್ಯಂತ ಕರಾಳ ದಿನ ಎಂದು ತಂದೆ ಹಾಗೂ ಉದ್ಯಮಿ ಅನಿಲ್ ಅಗರ್ವಾಲ್ ಹೇಳಿದ್ದಾರೆ.
‘ನನ್ನ ಪ್ರೀತಿಯ ಮಗ ಅಗ್ನಿವೇಶ್ ಬಹಳ ಬೇಗ ನಮ್ಮನ್ನು ಅಗಲಿದ್ದಾನೆ. ಅವನಿಗೆ ವಯಸ್ಸು ಕೇವಲ 49 ವರ್ಷ, ಉತ್ತಮ ಆರೋಗ್ಯ, ಪೂರ್ಣ ಕನಸ್ಸುಗಳನ್ನು ಹೊಂದಿದ್ದ. ಗಾಯದಿಂದ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದ. ಕಷ್ಟಗಳು ಕಳೆದವು ಎಂದು ಭಾವಿಸಿದ್ದೆವು. ಆದರೆ, ವಿಧಿಯಾಟ ಬೇರೆಯೇ ಇತ್ತು’ ಎಂದು ಅನಿಲ್ ಅಗರ್ವಾಲ್ ನೋವು ತೋಡಿಕೊಂಡಿದ್ದಾರೆ . ನನ್ನ ಆತ ಕೇವಲ ಮಗ ಮಾತ್ರವಲ್ಲ, ಸ್ನೇಹಿತ, ಹೆಮ್ಮೆ, ಜಗತ್ತು ಎಲ್ಲವೂ ಆಗಿದ್ದ. ಸ್ವಾವಂಬನೆಯ ಭಾರತ ನಿರ್ಮಾಣವಾಗಬೇಕೆಂಬುದು ಅಗ್ನಿಯ ಕನಸಾಗಿತ್ತು. ಒಂದು ದೇಶವಾಗಿ ನಮಗೇನೂ ಕೊರತೆ ಇಲ್ಲ, ಯಾಕೆ ನಾವು ಹಿಂದುಳಿಯಬೇಕು ಎಂದು ಆಗಾಗ್ಗೆ ಹೇಳುತ್ತಿದ್ದ. ನಾವು ಗಳಿಸುವ ಹಣದಲ್ಲಿ ಶೇ. 75ಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೆ ಮರಳಿಸುವುದಾಗಿ ಅಗ್ನಿಗೆ ಆಶ್ವಾಸನೆ ಕೊಟ್ಟಿದ್ದೆ. ಇವತ್ತು ಆ ಭರವಸೆಯನ್ನು ಪುನರುಚ್ಚರಿಸುತ್ತೇನೆ. ಇನ್ನಷ್ಟು ಸರಳ ಜೀವನ ನಡೆಸುವ ನಿರ್ಧಾರ ಮಾಡುತ್ತೇನೆ’ ಎಂದು ಅನಿಲ್ ಅಗರ್ವಾಲ್ ಪಣ ತೊಟ್ಟಿದ್ದಾರೆ.
ಅನಿಲ್ ಅಗರ್ವಾಲ್ ಅವರಿಗೆ ಇಬ್ಬರು ಮಕ್ಕಳು. ಅಗ್ನಿವೇಶ್ ಹಾಗು ಪ್ರಿಯಾ. ಆಕರ್ಷ್ ಹೆಬ್ಬಾರ್ ಎಂಬುವರನ್ನು ವಿವಾಹವಾಗಿರುವ ಪ್ರಿಯಾ ಅಗರ್ವಾಲ್ ಅವರು ವೇದಾಂತ ಗ್ರೂಪ್ನ ಬ್ಯುಸಿನೆಸ್ಗಳಲ್ಲಿ ಸಕ್ರಿಯವಾಗಿದ್ದಾರೆ.
Post a Comment