2.5ಲಕ್ಷ ರೂ. ಮೌಲ್ಯದ ಚಿನ್ನದ ಸರ ತಿಂದ ಎಮ್ಮೆ: ಬಂಗಾರಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿದ ಮಾಲೀಕರು
ಎಮ್ಮೆಯೊಂದು ಸುಮಾರು 3 ರಿಂದ 3.5 ತೊಲ ಚಿನ್ನದ ಸರವನ್ನು ತಿಂದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಎಮ್ಮೆಗೆ ಆಹಾರವಾಗಿ ಸೋಯಾಬೀನ್ ಸಿಪ್ಪೆಯನ್ನು ನೀಡುವಾಗ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವು ಆಕಸ್ಮಿಕವಾಗಿ ಬಟ್ಟಲು ಸೇರಿತ್ತು. ಚಿನ್ನವನ್ನೂ ಅನ್ನದಂತೆ ಭಾವಿಸಿದ ಎಮ್ಮೆ ಖುಷಿಯಿಂದ ಅದನ್ನು ಸ್ವಾಹಾ ಮಾಡಿದೆ.
ವಾಶಿಮ್ ಜಿಲ್ಲೆಯ ಮಂಗ್ರಾಲ್ಪಿರ್ ತಾಲೂಕಿನ ಸರ್ಸಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ.
ಬಹಳ ಸೂಕ್ಷ್ಮ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಬಳಿಕ ಚಿನ್ನದ ಸರವನ್ನು ಹೊರತೆಗೆಯಲಾಗಿದೆ. ಸಣ್ಣ ಹೊಲ ಮತ್ತು ಎಮ್ಮೆ ಹೊಂದಿರುವ ಸ್ಥಳೀಯ ರೈತ ರಾಮಹರಿ ಭೋಯಾರ್, ಸೆ 27ರಂದು ತನ್ನ ಹೊಲದಿಂದ ಸೋಯಾಬೀನ್ ಬೀಜಗಳನ್ನು ತಂದಿದ್ದ. ಆತನ ಪತ್ನಿ ಗೀತಾ ಬಾಯಿ ಸೋಯಾಬೀನ್ ಸುಲಿದು ಅದರ ಸಿಪ್ಪೆಗಳನ್ನು ಒಂದು ತಟ್ಟೆಯಲ್ಲಿ ಇರಿಸಿದ್ದಳು. ತಾನು ಮಲಗುವ ಕೊಠಡಿಯಲ್ಲಿಯೇ ಆಕೆ ಆ ತಟ್ಟೆಯನ್ನು ಇರಿಸಿದ್ದಳು.
ರಾತ್ರಿ ಮಲಗುವ ಮುನ್ನ ತನ್ನ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಳಚಿದ್ದ ಗೀತಾ ಬಾಯಿ, ಅದನ್ನು ಸೋಯಾ ಬೀನ್ ಸಿಪ್ಪೆ ಇರಿಸಿದ್ದ ತಟ್ಟೆಯಲ್ಲಿಯೇ ಇಟ್ಟಿದ್ದಳು. ಆದರೆ ಮರುದಿನ ಬೆಳಿಗ್ಗೆ ಮನೆಯವರು ಯಾರೋ, ಸೋಯಾಬೀನ್ ಸಿಪ್ಪೆಯನ್ನು ಎಮ್ಮೆಗೆ ಆಹಾರವಾಗಿ ನೀಡಿದ್ದಾರೆ. "ಚಿನ್ನದ ಸರ ಕಾಣೆಯಾಗಿರುವುದು ಮಧ್ಯಾಹ್ನದ ಬಳಿಕ ನಮಗೆ ಗೊತ್ತಾಗಿತ್ತು. ಆರಂಭದಲ್ಲಿ, ಅದನ್ನು ಯಾರೋ ಕದ್ದಿದ್ದಾರೆ ಎಂದೇ ಭಾವಿಸಿದ್ದೆವು.
ಆದರೆ ವಿಚಾರ ಮಾಡಿದಾಗ, ಸೋಯಾಬೀನ್ ಸಿಪ್ಪೆಯ ತಟ್ಟೆಯಲ್ಲಿ ಸರ ಇರಿಸಿದ್ದು, ನೆನಪಾಗಿತ್ತು. ಆಹಾರದ ಜತೆ ಸರವನ್ನೂ ಎಮ್ಮೆ ತಿಂದಿದೆ ಎನ್ನುವುದು ಅರಿವಾಗಿತ್ತು. ಕೂಡಲೇ ನಾವು ಎಮ್ಮೆಯನ್ನು ಸ್ಥಳೀಯ ಪಶು ವೈದ್ಯರ ಬಳಿ ಕರೆದೊಯ್ದೆವು" ಎಂದು ರಾಮಹರಿ ತಿಳಿಸಿದ್ದಾನೆ. ಗ್ರಾಮದ ಪಶು ವೈದ್ಯ ಡಾ ಜ್ಞಾನೇಶ್ವರ್ ಇಧೋಲೆ ಅವರು ವಾಶಿಮ್ಗೆ ಎಮ್ಮೆಯನ್ನು ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಲ್ಲಿ ನುರಿತ ಪಶು ವೈದ್ಯ ಡಾ ಬಾಳಾಸಾಹೇಬ್ ಕೌಂಡಿನ್ಯ ಸಾಹಸಕ್ಕೆ ಮುಂದಾದರು.

Post a Comment