".

Header Ads

ಭಯೋತ್ಪಾದನೆ ನಿಗ್ರಹಕ್ಕೆ ವಿಶೇಷ ತಂಡ: ಅಮಿತ್ ಶಾ

 


ಸಮಗ್ರ ಅಂಕಿ ಅಂಶವನ್ನು ಆಧರಿಸಿ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರಾಧಾರಿತ ವಿಶ್ಲೇಷಣೆಗಳ ನೆರವಿನಲ್ಲಿ ಭಯೋತ್ಪಾದನೆ ಜಾಲದ ನಿರ್ಮೂಲನೆಗೆ ವಿಶೇಷ ತಂಡವನ್ನು ರಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಲವು ತೋರಿದ್ದಾರೆ.

'ರಾಷ್ಟ್ರೀಯ ಭದ್ರತೆ ಹೊಣೆಗಾರಿಕೆಯಲ್ಲಿ ನಿಯೋಜಿತವಾಗಿರುವ ವಿವಿಧ ಸಂಸ್ಥೆಗಳಿಂದ ಆಯ್ಕೆ ಮಾಡಿಕೊಳ್ಳಲಾದ ಯುವ, ತಾಂತ್ರಿಕವಾಗಿ ಪರಿಣತರಾಗಿರುವ ಮತ್ತು ವೃತ್ತಿ ಒಲವುಳ್ಳ' ಅಧಿಕಾರಿಗಳ ತಂಡವನ್ನು ರಚಿಸುವುದು ನನ್ನ ಉದ್ದೇಶವಾಗಿ' ಎಂದು ಅವರು ಹೇಳಿದ್ದಾರೆ.

ಭದ್ರತೆಗೆ ಸಂಬಂಧಿಸಿದ ಹೊಸ ಮತ್ತು ವಿಭಿನ್ನ ಸವಾಲುಗಳ ಹಿನ್ನೆಲೆಯಲ್ಲಿ ನಮ್ಮ ಹೊಣೆಗಾರಿಕೆಯನ್ನು ಕುರಿತು ಮುಂದಾಗಿ ಯೋಚಿಸುವುದು ಅಗತ್ಯವಾಗಿದೆ ಅವರು ಅಭಿಪ್ರಾಯಪಟ್ಟರು.

ಭದ್ರತೆ ಮತ್ತು ಕಾನೂನು ಜಾರಿಗೆ ಸಂಬಂಧಿತ ವಿವಿಧ ಸಂಸ್ಥೆಗಳ ಮುಖ್ಯಸ್ಥರಿದ್ದ ಗುಪ್ತದಳದ ಬಹು ಏಜೆನ್ಸಿ ಕೇಂದ್ರದ (ಎಂಎಸಿ) ಕಾರ್ಯ ಪರಿಶೀಲನೆಯ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಮಣಿಪುರದಲ್ಲಿ ಇತ್ತೀಚಿಗೆ ಭಯೋತ್ಪಾದನಾ ದಾಳಿ ಕೃತ್ಯಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಈ ಮಹತ್ವದ ಸಭೆಯು ನಡೆದಿದೆ.

ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಒಟ್ಟು ಸರ್ಕಾರವಾಗಿ ತೀರ್ಮಾನವನ್ನು ತೆಗೆದುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, ಭಯೋತ್ಪಾದನೆ ಜಾಲವನ್ನು ಹತ್ತಿಕ್ಕಲು ಎಲ್ಲ ಸಂಸ್ಥೆಗಳ ನಡುವೆ ದೊಡ್ಡ ಮಟ್ಟದಲ್ಲಿ ಹೊಂದಾಣಿಕೆಯು ಅಗತ್ಯವಾಗಿದೆ ಎಂದರು.

ಬಹು ಏಜೆನ್ಸಿ ಕೇಂದ್ರದ (ಎಂಎಸಿ) ಜೊತೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಈ ಮೂಲಕ ಎಲ್ಲ ಕಾನೂನು ಜಾರಿ ಸಂಸ್ಥೆಗಳು ಸೇರುವ ವೇದಿಕೆಯಾಗಿ ಇದನ್ನು ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ಎಂಎಸಿ ಕೂಡಾ ದಿನದ 24 ಗಂಟೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ತಕ್ಷಣದ ಕ್ರಮ ಅಗತ್ಯವಿರುವ ಗುಪ್ತದಳ ಮಾಹಿತಿಯನ್ನು ಸಂಬಂಧಿತ ಭಾಗಿದಾರರ ಜೊತೆ ಹಂಚಿಕೊಳ್ಳಬೇಕು ಎಂದು ಸಲಹೆ ಮಾಡಿದರು.

Powered by Blogger.